Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೌರಿಶಂಕರ್ ನಟನೆಯ`ಕೆರೆಬೇಟೆ` ಚಿತ್ರದ ಟೀಸರ್ ಔಟ್: ಮೀನು ಬೇಟೆಗೆ ಧನಂಜಯ, ದಿನಕರ್ ಸಾಥ್:
Posted date: 04 Thu, Jan 2024 09:47:21 PM
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳಿಗೇನು ಬರವಿಲ್ಲ. ಸಾಕಷ್ಟು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸುತ್ತಿವೆ. ಇದೀಗ ಮತ್ತೊಂದು ವಿನೂತನ ಸಿನಿಮಾ ಕನ್ನಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ, ಅದೇ `ಕೆರೆಬೇಟೆ`. ಈಗಾಗಲೇ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ `ಕೆರೆಬೇಟೆ`, ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. 
 
ಇದು ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. ಕೆರೆಬೇಟೆ, ಗೌರಿ ಶಂಕರ್ ನಾಯಕನಾಗಿ ನಟಿಸಿದ್ದಾರೆ. ರಾಜ್‌ಗುರು ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಗೌರಿ ಶಂಕರ್ ಇದೀಗ ಕೆರೆಬೇಟೆ ಮೂಲಕ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ದೇಶಕ  ರಾಜ್‌ಗುರು ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಅವರಿಗೆ ಸಿನಿಮಾ ರಂಗ ಹೊಸದೇನಲ್ಲ, ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೀಗ ಕೆರೆಬೇಟೆ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
ಕೆರೆಬೇಟೆ ಶೈಲಿಯಲ್ಲಿಯೇ ಪ್ರೆಸ್ ಮೀಟ್ ಮಾಡಿರುವುದು ವಿಶೇಷವಾಗಿತ್ತು. ಬೆಂಗಳೂರಿನ ಮಲ್ಲತಹಳ್ಳಿ ಕೆರೆದಂಡೆಯಲ್ಲಿ ನಡೆದ ಟೀಸರ್ ರಿಲೀಸ್ ಈವೆಂಟ್ ಗಮನಸೆಳೆಯಿತು.

ಟೀಸರ್ ರಿಲೀಸ್ ಈವೆಂಟ್ ನ ವಿಶೇಷ ಅತಿಥಿಗಳಾಗಿದ್ದ ಡಾಲಿ ಧನಂಜಯ ಮತ್ತು ದಿನಕರ್ ತೂಗುದೀಪ್ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪವನ್ ಒಡೆಯರ್, ಗುರು ದೇಶಪಾಂಡೆ, ಜಡೇಶ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದರು.

ಟೀಸರ್ ರಿಲೀಸ್ ಮಾಡಿ ಮಾತನಾಡಿದ ಡಾಲಿ, ನಮ್ಮ ನೆಲದ ಸಿನಿಮಾಗಳು ಯಾವಾಗಲು ಸೋಲಲ್ಲ. ಕೆರೆಬೇಟೆ ಕೂಡ ನಮ್ಮ ನೆಲದ ಸಿನಿಮಾ. ಎಷ್ಟೋ ಜನರಿಗೆ ಕೆರೆಬೇಟೆಯ ಬಗ್ಗೆ ಗೊತ್ತಿಲ್ಲ. ಈ ಸಿನಿಮಾ ಮೂಲಕ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಸಂಸ್ಕೃತಿಯ  ಸಿನಿಮಾವಿದು ಎಂದರು.  ಇನ್ನೂ ದಿನಕರ್ ತೂಗುದೀಪ ಅವರು ಮಾತನಾಡಿ, ನಾಯಕ ಗೌರಿಶಂಕರ್ ನನಗೆ ತುಂಬಾ ಸಮಯದಿಂದ ಗೊತ್ತಿದೆ. ಈ ಸಿನಿಮಾ ಈಗಾಗಲೆ ನಾನು ನೋಡಿದ್ದೇನೆ, ತುಂಬಾ ಚೆನ್ನಾಗಿದೆ, ಈ ಸಿನಿಮಾ ಗೆದ್ದೇಗೆಲ್ಲುತ್ತೆ ಎಂದರು.

ಚಿತ್ರದ ನಿರ್ದೇಶಕ ರಾಜ್ ಗುರು ಮಾತನಾಡಿ, ನಾನು ಮಲೆನಾಡಿನ ಹುಡುಗ‌. ಚಿಕ್ಕ ವಯಸ್ಸಿನಿಂದ ಕೆರೆಬೇಟೆ ನೋಡಿಕೊಂಡು ಬೆಳೆದವನು. ಈ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಇದೀಗ ನನಸಾಗಿದೆ` ಎಂದರು. 

ನಾಯಕ ಗೌರಿಶಂಕರ್ ಮಾತನಾಡಿ, ಶ್ರದ್ದೆಯಿಂದ ಸಿನಿಮಾ ಮಾಡಿದ್ದೇವ. ಎಲ್ಲರೂ ಸಿನಿಮಾ ನೋಡಿ. ಸಿನಿಮಾಗೆ ಕೇವಲ ಮೌತ್ ಪಬ್ಲಿಸಿಟಿ ಮಾತ್ರ ಅಲ್ಲ, ಪ್ರಮೋಷನ್ ಬೇಕು  ಎಂದರು.

ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಬಿಂದು ಕಾಣಿಸಿಕೊಂಡಿದ್ದಾರೆ. ಬಿಂದು ಅವರಿಗೆ ಇದು ಮೊದಲ ಸಿನಿಮಾ. ಉಳಿದಂತೆ, ನಟ ಸಂಪತ್, ಗೋಪಾಲ್ ದೇಶಪಾಂಡೆ, ನಟಿ ಹರಿಣಿ ಸೇರಿದಂತೆ ಅನೇಕರು ಕಾಣಿಕೊಂಡಿದ್ದಾರೆ.

ಕೆರೆಬೇಟೆ ಎಂದರೇನು?

ಕೆರೆಬೇಟೆ ಎಂದರೆ ಮಲೆನಾಡು ಭಾಗದದಲ್ಲಿ ಮೀನು ಬೇಟೆಯಾಡುವ ಒಂದು  ಪದ್ಧತಿ. ಮಲೆನಾಡಿನಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಕೆರೆಬೇಟೆ ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು  ಹಳ್ಳಿ ಸೊಗಡಿನ ಕಥೆಯನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.  

ಈ ಚಿತ್ರಕ್ಕೆ ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ಇಬ್ಬರೂ ತಮ್ಮ ಜನಮನ ಸಿನಿಮಾ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಕೆರೆಬೇಟೆ ಸಿನಿಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರ ಹಾಗೂ ಸೊರಬ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿದೆ. ಸದ್ಯ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಯಾವಾಗ ತೆರೆಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೌರಿಶಂಕರ್ ನಟನೆಯ`ಕೆರೆಬೇಟೆ` ಚಿತ್ರದ ಟೀಸರ್ ಔಟ್: ಮೀನು ಬೇಟೆಗೆ ಧನಂಜಯ, ದಿನಕರ್ ಸಾಥ್: - Chitratara.com
Copyright 2009 chitratara.com Reproduction is forbidden unless authorized. All rights reserved.